Wednesday, September 26, 2012

 ✈ ಮುಂಗಾರಿನ  ಮಳೆಯಲ್ಲಿ,  ⚡⚡⚡⚡⚡.                 2004
                                         ಹನಿ ಹನಿ ಪ್ರವಾಸ ,..... !!

              ಮಾರ್ಚ್, April , ಮೇ, ತಿಂಗಳು ಪೂರ್ತಿ   ಮದುವೆ, ಮುಂಜಿ, ಗೃಹಪ್ರವೇಶ,  ಈ ಓಡಾಟದಲ್ಲಿ  ಜನಸಾಗರ ನೋಡಿ, ನೋಡಿ, ಸಾಕಾಗಿತ್ತು.  ನಂತರದ  ಜೂನ್ ಜುಲೈ, ಮಳೆಗಾಲದ ಕಣ್ಣು ಮುಚ್ಚಾಲೆ .. !! ಹೇಗಾದರೂ  ಒಂದು  Monsoon  Tour  ಹೋಗ್ಬೇಕು ಅಂತ  ಯೋಚನೆ ಮಾಡ್ತಾ ಇದ್ವಿ .  ನಾನು, ಶಾರದಾ, ಮಾತಾ, ವಿಜಿ, ತಂಗ ,  ಸಾಗರದ ಕಡೆ  ಹೋಗಿಬರೋಣಾ ಅಂತ, ಆಗಸ್ಟ್ 1 ಕ್ಕೆ deside ಮಾಡಿ, ಅರ್ಜೆಂಟಾಗಿ ಪ್ಯಾಕ್ ಮಾಡಿ, ರಾತ್ರಿ ಹೊರಡಬೇಕಿತ್ತು . ಅಷ್ಟರಲ್ಲಿ ತಂಗ ಫೋನ್ ಮಾಡಿ, " ಸಾಗರದ ಕಡೆ ತುಂಬಾ ಮಳೆ, ಹೊರಗೆ ಕಾಲಿಡೋಕೆ ಆಗಲ್ವಂತೆ, ಇನ್ನೊಂದ್ ವಾರ ನೋಡಿ  ಹೊರಡೋಣಾ " ಅಂದ್ಲು.. ಸರಿ,  ಕ್ಯಾನ್ಸಲ್ ಆಯ್ತು.  ಈ ಮಧ್ಯೆ  ಮೈಸೂರಿಂದ  ಶ್ರೀದೇವಿ, ಕೇಶವ ಆಗಸ್ಟ್ ನಲ್ಲಿ  ಮೂರು ದಿನ ರಜಾ ಇದೆ.  ಎಲ್ಲಾದ್ರೂ ಹೋಗೋಣ್ವಾ ?  ಅಂತ ಫೋನ್ ಮಾಡಿದ್ರು.  ಅದು ಹೇಗೋ, ಕಾಲ್ ಮೇಲ್ ಕಾಲ್ ಹಾಕ್ಕೊಂಡ್ ಕೂತ್ಕೊಂಡ್ ,  ಹಾಗೇ ಹೀಗೇ  ಅಲ್ಲಿ ಇಲ್ಲಿ  ಕಾಲ್ ಮಾಡಿ,  ಪ್ರವಾಸದ ಮಾರ್ಗ,  ತಂಗುವ ಸ್ಥಳ,  ಪ್ರೇಕ್ಷಣೀಯ ಸ್ಥಳ,  ಪ್ರವಾಸಿಗರು  ಎಲ್ಲ settle ಆಯ್ತು..  ದೈವಬಲವಿದ್ರೆ, ಹಾಗೇ , ಎಲ್ಲಾ ಒದಗಿಬರುತ್ತೆ ....  
               " ಹುಯ್ಯೋ  ಹುಯ್ಯೋ ಮಳೆರಾಯ , ಹೂವಿನ ತೋಟಕೆ ನೀರಿಲ್ಲ " , ಇದು ನಂ ಶಾಲೇಲಿ ಹೇಳ್ಕೊಟ್ಟಿದ್ದು ..  ಭಾರತದಲ್ಲಿ  ಮಳೆಗೊಂದು ಪಾವಿತ್ರ್ಯತೆ, ಶ್ರೇಷ್ಠ ಸ್ಥಾನ !!  ಈಗಿನ ಕಾನ್ವೆಂಟ್ ನಲ್ಲಾದ್ರೆ ,  Rain Rain go away ಅಂತ ಉಪದೇಶ ಮಾಡ್ತಾರೆ,  ನಂ  ರೈತ ಕೇಳಿದ್ರೆ ಒಂದೇನು ?  ಎಷ್ಟೋ  sixer  ಬಾರಿಸೋದು ಗ್ಯಾರಂಟಿ.. ಇರಲಿ,  ಇದು ಇಂಡಿಯನ್ culture ಗೋಸ್ಕರ ಹೇಳಿದ್ದು.. ಈ ನಂ ಪದ್ಯಕ್ಕೆ   ಪದಶಃ ಅರ್ಥ  ಹುಡುಕ್ಬೇಕಂದ್ರೆ ,  ಕಾಂಕ್ರೀಟ್ ಸಿಟಿ ಬೆಂಗಳೂರಲ್ ಕೂತು  ಆಕಾಶದ ಕಡೆ  ತಲೆ ಎತ್ತಿದ್ರೆ  ಬರೀ ಕತ್ತುನೋವು ಬರೋದಷ್ಟೇ ಲಾಭ ..ನಿಜವಾಗಿ  ಮಳೆ ಸುಖ  ಅನುಭವಿಸ್ಬೇಕಂದ್ರೆ ಖಂಡಿತಾ  ಮಲೆನಾಡಿಗೆ  ಪ್ರವಾಸ ಹೋಗ್ಬೇಕು.  ಮೊಣಕಾಲ್ ತನಕ ಸೀರೆ ಎತ್ತಿ ,  ಛತ್ರಿ ಬಿಚ್ಚಿ,   ಇದ್ರೆ  rain coat ಹಾಕ್ಕೊಂಡು ,  ರೆಪ್ಪೇ ಮೇಲ್ ಸುರಿಯೋ    ಮಳೇ ನೀರನ್ನ   ಒರೆಸ್ಕೊಂಡು , ಆಕಾಶದಿಂದ ಧಾರೆಯಾಗಿ ಹರಿಯೋ ಮಳೆನೀರಿನ್ ಪರದೆ ಸರಿಸಿ,  ಅಲ್ಲಿ ಕಾಣೋ ಮಸಕು ಮಸಕಾದ ಬೆಟ್ಟ, ಬಯಲು, ಝರಿ, ತೊರೆ ,  ಕಣ್ಣುಮುಚ್ಚಾಲೆ ಆಡೋ ಬೆಳಕು,  ಸೂರ್ಯ , ಮರ, ಗಿಡ, ಬಳ್ಳಿ,  ಗೂಡುಗಳಲ್ಲಿ  ಪಟ ಪಟಾ  ಅಂತ ರೆಕ್ಕೆ  ಬಡಿಯೋ ಪಕ್ಷಿ ,  ಇದನ್ನೆಲ್ಲಾ  ಒದ್ದಾಡ್ಕೊಂಡ್  ನೋಡೋದೇ ಮಜಾ...!!... 
                      ಒಟ್ಟು ೩೮ ಜನ, ೩ ಟೆಂಪೋ ಟ್ರಾವೆಲ್ ರೆಡಿಯಾಗಿ ಆಗಸ್ಟ್ ೧೨ ರಾತ್ರಿ ನನ್ನ ಮಗಳು, ಮೊಮ್ಮಗ, ಬಂದಮೇಲೆ ೧೧ ಗಂಟೆಗೆ ಹೊರಟಿದ್ದಾಯ್ತು. ಅತ್ತ ಮೈಸೂರಿನಿಂದ, ಕೇಶವನ ಸಂಸಾರ ಕಾರಿನಲ್ಲಿ ಹೊರಟು, ಬೆಳಿಗ್ಗೆ ಶಿವಮೊಗ್ಗೆ ಯಲ್ಲಿ, ಸೇರಿದೆವು. ಅಲ್ಲಲ್ಲೇ ಇದ್ದ ಹೋಟೆಲ್ ಗಳಲ್ಲಿ ರೂಂ ಮಾಡಿ,  ನಿತ್ಯಕರ್ಮ ಮುಗಿಸಿ,  ಹೊರಟಿದ್ದು " ಕೂಡಲಿ " ಗೆ.  ಇದು  ತುಂಗಾ, ಭದ್ರಾ ನದಿಗಳ ಸಂಗಮಕ್ಷೇತ್ರ.  ಇಲ್ಲಿ  ಶಂಕರಮಠ ,  ಶಾರದಾದೇವಿ ಗುಡಿ,  ಹೊಯ್ಸಳ ಶಿಲ್ಪದ   ಶಿವಾಲಯ, ಚಿಂತಾಮಣಿ ನರಸಿಂಹ ಗುಡಿ, ಇದೆ.  ದೇವಾಲಯದ ಮುಂಭಾಗದಿಂದ  ಭದ್ರಾ,  ಹಿಂಭಾಗದಿಂದ ತುಂಗಾ ನದಿಯೂ ಬಂದು   ಸೋಪಾನ ಕಟ್ಟೆಯ ಬಳಿ,  ಸಂಗಮಿಸುತ್ತದೆ.  ಮಳೆಗಾಲವಾದ್ದರಿಂದ ತುಂಗಾ ಕೆಂಬಣ್ಣದಲ್ಲೂ , ಭದ್ರಾ  ತುಸು ಕಪ್ಪಾಗಿಯೂ ಇತ್ತು.  ಕೆಲವರಿಗೆ  ನೀರಿನಲ್ಲಿ ಆಡುವ,  ಕೆಲವರಿಗೆ ಮೌನ ವೀಕ್ಷಣೆ, ಕೆಲವರ ಕೈಯ್ಯಲ್ಲಿ   ಕ್ಯಾಮೆರ, ವೀಡಿಯೋ ಸಂಭ್ರಮ ..  ಸುಮಾರು ೯೦ ನಿಮಿಷ ಅಲ್ಲಿದ್ದು,  ಶಿವಮೊಗ್ಗೆಯಲ್ಲಿ   ಊಟ ಮುಗಿಸಿ ಹೊರಟಿದ್ದು,   " ತ್ಯಾವರೆಕೊಪ್ಪಕ್ಕೆ" .. ಇಲ್ಲಿ ಸಿಂಹಧಾಮ .. ಸ್ಪೆಷಲ್ ಬಸ್ಸಿನಲ್ಲಿ  ಒಬ್ಬರಿಗೆ ೨೫ ರೂ . Entry Fee.   ಸರ್ಪಗಳು, ಕರಡಿ, ಹುಲಿ , ಚಿರತೆ,  ಎಲ್ಲ ಚೆನ್ನಾಗಿತ್ತು. - ಒಳಗಿತ್ತಲ್ಲಾ ಅದಕ್ಕೇ..!! .  ಆಮೇಲೆ " ಗಾಜನೂರು ಆಣೆಕಟ್ಟು. " ಇಲ್ಲಿ ಹೊಸ ಅಣೆಕಟ್ಟಿನ ಕಾಮಗಾರಿ.. ಟೆಂಪೋ  ದೂರದಲ್ಲೇ ನಿಲ್ಲಿಸಿ, ನಡೆದೆವು.  ೨೨ ಗೇಟ್ ಗಳಿದ್ದು  ಎಲ್ಲವನ್ನೂ ತೆರೆದಿದ್ದು  ನೀರು ಭೋರ್ಗರೆಯುತ್ತಿತ್ತು.  ಮಳೆಗಾಳಿಯ ಹೊಡೆತಕ್ಕೆ , ಹುಚ್ಚು ರಭಸ,  ಸಿಕ್ಕಿದ್ದನ್ನೆಲ್ಲಾ ಕೊಚ್ಕೊಂಡ್ ಹೋಗ್ತಾ ಇತ್ತು.  ಜರ್ಕಿನ್ ಹಾಕಿ  ಕೊಡೆ ಹಿಡಿದು  ತಿರುಗಿದ್ದೇ ತಿರುಗಿದ್ದು .  ವಾಪಸ್ ಬರುವಾಗ, " ಮಂಡಗದ್ದೆ ಪಕ್ಷಿಧಾಮ." --   ಹರಿವ ಕೆಂಪು ನೀರು,  ಹಸಿರು ಮರಗಳು ,  ಮಳೆಹನಿಗೆ ಪಟಪಟ ರೆಕ್ಕೆ ಬಡಿಯುವ ಬೆಳ್ಳಕ್ಕಿಗಳು,  ಇವೆಲ್ಲ ನೋಡಿದರೇ ಚೆನ್ನ.  ಶಿವಮೊಗ್ಗೆಗೆ ರಾತ್ರಿ ಬಂದು,  ನಮ್ಮ ಬಂಧು  ನಟರಾಜ್ ರವರ ಮನೆಯಲ್ಲಿ, ಎಲ್ಲರಿಗೂ  ತಿಂಡಿ ಕಾಫಿ ಸಮಾರಾಧನೆ... 
ನಂತರ , ನಮ್ಮ ಟೆಂಪೋದವರೆಲ್ಲ  ರಾತ್ರಿಹೊರಟು  ಸಾಗರದಲ್ಲಿ  Varadashree  ಹೋಟೆಲ್ ನಲ್ಲಿ ತಂಗಿದೆವು . ಡಬಲ್ ರೂಂಗೆ  ದಿನಕ್ಕೆ ೨೫೦ ರೂ. ಊಟಾನೂ ಚೆನ್ನಾಗಿತ್ತು.  ಮಿಕ್ಕೆರಡು ಗಾಡಿಗಳು, ಬೆಳಿಗ್ಗೆ ೭ ಕ್ಕೆ, ಬಂದು ಸೇರಿದರು . ಆಗಸ್ಟ್ ೧೪ .. ಆದಿತ್ಯನ ಬರ್ತ್ ಡೇ.. ಟಿಫನ್  ಮಾಡಿ, ೩೦ ಕಿಮೀ  ದೂರದ " ಸಿಗಂಧೂರಿಗೆ " - ಹೊರಟೆವು.. 
               ಹೋಗುವ ಮಾರ್ಗದಲ್ಲಿ ,  ನೀನಾಸಂ ಸಂಸ್ಥೆಯ ರೂವಾರಿ,   ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ             ಕೆ. ವಿ. ಸುಬ್ಬಣ್ಣನವರ, ಹೆಗ್ಗೋಡು ಇದೆ..   ನಮ್ಮೂರಿನಲ್ಲಿರುವ, " ದೇಶೀ " ಅಂಗಡಿಗಳಿಗೆ,  ಸೀರೆ , ಚೀಲ, ಪಂಚೆ,  ಮುಂತಾದ ವಸ್ತ್ರಗಳನ್ನು  ನೇಯುವ   "ಚರಕ" ಗ್ರಾಮ  ಇರುವುದೂ  ಇಲ್ಲೇ..    ...ಮುಂದೆ  ಶರಾವತಿಯ  ವಿಶಾಲ ಹರವು..  ಹಸಿರು ಮಿಶ್ರಿತ  ನೀಲ ಬಣ್ಣದ ನದಿ ,  ಮಧ್ಯೆ ಮಧ್ಯೆ ನಡುಗಡ್ಡೆಗಳು,  ಅದರಲ್ಲಿ   ಕಡು ಹಸಿರಿನ ಮರಗಳು..   ನೀರಿನ ಹರಿವು ,    ಆಳ ಮಳೆಗಾಲವಾದ್ದರಿಂದ ಪ್ರಬಲ .. ಇಲ್ಲೊಂದು ಪುಟ್ಟ ಕಡವು. .....ದೊಡ್ಡ  ಸರಕಾರೀ ಲಾಂಚ್ ಒಂದು ಜನರನ್ನು,  ವಾಹನಗಳನ್ನು  ,   ಸಾಮಾನು ಸರಂಜಾಮನ್ನು  ಸಾಗಿಸಲು  ನಿರಂತರವಾಗಿ  ಎರಡೂ ದಡಗಳಿಗೆ  ತಿರುಗಾಡುತ್ತಿರುತ್ತದೆ . ವ್ಯಕ್ತಿಯೊಬ್ಬರಿಗೆ  ೧ ರೂ , ವಾಹನವೊಂದಕ್ಕೆ  ೧೫ ರೂ ಶುಲ್ಕ.  ಪ್ರಯಾಣಿಸುವ ಕಾಲ,   ೩೦ ರಿಂದ ೪೦ ನಿಮಿಷ..  ಎಲ್ಲರಿಗೂ ಏನೋ ಹಿಗ್ಗು,  ಕೇಶವನ ಕಾರನ್ನೂ  ಏರಿಸಿದ್ದಾಯ್ತು..  ಆ ಪುಟ್ಟ ಹಡಗಿನ ಪ್ರಯಾಣ,  ಮರೆಯದ ಅನುಭವ . ಕಟ್ಟೆಯ ತುದಿಯಲ್ಲಿ ಜಾಗ ಹಿಡಿದು ಸುತ್ತಲಿನ ಸೊಬಗಿನ ವೀಕ್ಷಣೆ, ಮಳೆಗಾಳಿಗೆ ನನ್ನ ಛತ್ರಿ , ಡಿಶ್ antenaa ಆಗಿದ್ದು super ..ತಂಡ ತಂಡವಾಗಿ ಫೋಟೋ ತೆಗೆದಿದ್ದೂ ತೆಗೆದಿದ್ದೇ.. ಆ ಬದಿಯ ದಡದಲ್ಲಿ ಇಳಿದಾಗ , ಅಲ್ಲೊಂದು ಬೋರ್ಡ್ " ಕಳಸವಲ್ಲಿ ಪೋಸ್ಟ್ " .. ಇದ್ದಿದ್ದೇ  ಮೂರೋ ನಾಲ್ಕೋ ಮನೆ.   ಅದರಲ್ಲೊಂದು, ಹೋಟೆಲ್.   ೪೦ ಜನ ಊಟಕ್ ಬರ್ತೀವಿ ಅಂತ ಹೇಳಿ,  ಬಸ್ನಲ್ಲಿ   ದೇವಸ್ಥಾನಕ್ಕೆ ಹೊರಟ್ವಿ ..    ಒಬ್ಬರಿಗೆ ೧ ರೂ.....ಇದ್ದ ದೂರ  , ೪ ಕಿ.ಮೀ. ... ಅವರವರ ಭಾವಕ್ಕೆ ತಕ್ಕಂತೆ ಪೂಜೆ ಮುಗಿಸಿ,       ಶ್ರೀ ಚೌಡೆಶ್ವರೀ ಸಂನಿಧಿಯಿಂದ  ಹೊರಬಂದಾಗ   ಬಸ್ ಹೊರಟುಹೋಗಿತ್ತು,  ಮಾಡೋದೇನು ?..  ಚಿಟಿ ಚಿಟಿ ಮಳೆಯಲ್ಲಿ  ರಸ್ತೆ ಬದಿ ತೊರೆಯಲ್ಲಿ  ಕಾಲಾಡಿಸ್ತಾ  ೪ km ನಡೆದದ್ದೇ  ಗೊತ್ತಾಗ್ಲಿಲ್ಲ ..ಕೇಶವನ ಕಾರು ,  ಅತಿ ಚಿಕ್ಕವರ,  ದೊಡ್ಡವರ ಪಿಕಪ್ ,  ಡ್ರಾಪ್ ಗಳಲ್ಲೇ  busy ಯಾಗಿತ್ತು..  ಕಳಸವಲ್ಲಿ ಹೋಟೆಲ್ ನಲ್ಲಿ   ಅಷ್ಟು ಜನ  ಬಂದೇ ಇರ್ಲಿಲ್ಲ  ಅನ್ಸತ್ತೆ.  ಊಟದೆಲೇನೆ  ಕಮ್ಮಿಇತ್ತು..  ಪಡ್ಡೆ ವಯಸ್ನೋರೆಲ್ಲ ಒಂದೆಲೇಲಿ,  ಮೂರ್ಮೂರು ಜನ ಊಟ...  ಮುತ್ತುಗದೆಲೆಯ ಮೇಲೆ,  ಬಿಸಿಬಿಸಿ ಅನ್ನ ,  ಸೌತೆಕಾಯಿಯ  ಘಮಘಮಿಸುವ ಸಾರು,  ಹಬೆಯೊಡನೆ  land ಆದಾಗ   ನಡೆದ ಆಯಾಸವನ್ನೂ ಮರೆತು ,  ಬಡಿಸಿದ್ದ ಊಟವೆಲ್ಲ  traffic jam ಆಗದೆ ,  ೮೦ km  ಸ್ಪೀಡಲ್ಲಿ  ಹೋಗ್ತಾನೆ ಇತ್ತು..  ಹೋಟೆಲ್ ಅನ್ನೋ ಗುಡಿಸಲು ಭರ್ತಿ  ನಾವೇ .. ೪೩ ಜನ..  ಶಶಿಕುಮಾರೂ   ಸಹ  ಬಡಿಸೋಕೆ ನಿಂತಿದ್ರು .. ತದಿಯಾರಾಧನೆ  ನೆನೆಪಾಗಿರ್ಬೇಕು .... ಲಾಂಚ್ ಬರಲು ಇನ್ನೂ ಟೈಮ್ ಇತ್ತು.. ಎಲ್ರಿಗೂ ಒಂದ್ ರೌಂಡ್ ಟೀ ನೂ ಆಯ್ತು.. ಪುನಃ ಲಾಂಚ್  ಪ್ರಯಾಣದ ಸುಖ ಅನುಭವಿಸಿ ,  ನಮ್ಮ ನಮ್ಮ ವ್ಯಾನ್ ಏರಿದೆವು..  ಮುಂದೆ " ಇಕ್ಕೇರಿ..." --  
         ಇಕ್ಕೇರಿ..... ಅಘೋರೇಶ್ವರ  ದೇವಾಲಯ..  ವಾಸ್ತು ಶೈಲಿ ವಿಭಿನ್ನ,  ಕೆಳದೀ ಸಂಸ್ಥಾನಕ್ಕೆ  ಸೇರಿದ ಕಾಲ.. ೧೫೬೦ ರಿಂದ ೧೬೪೦ .. ವಿಜಯನಗರ, ದ್ರಾವಿಡ, ಶೈಲಿಯ ಕಟ್ಟಡ .. ಕೆಂಪು granite ಶಿಲೆಯಿಂದ ಕಟ್ಟಿದ್ದಾರೆ .. ಸುತ್ತಮುತ್ತ ಹಸಿರು, ಗದ್ದೆ , ಮರಗಳು,  ದೊಡ್ಡ ನಂದಿ ಎಲ್ಲಾ ಚೆನ್ನ..  ಇಲ್ಲಿ ಅನಾನಸ್ ಹಣ್ಣು ಹೇರಳ ..  ಇದು ಸಾಗರದಿಂದ ೬ km ..  ನಂತರ ಹೊರಟಿದ್ದು,  "   
 ವರದಾಮೂಲ " -- ಕ್ಕೆ. 
           ಹೆಸರೇ ಹೇಳುವಂತೆ,  ಇದು ವರದಾನದಿಯ ಉಗಮ ಸ್ಥಾನ .. ಇಲ್ಲಿ ವರದಾಂಬ ಸನ್ನಿಧಿ .. ವರದಾಂಬೆಯ ಪಾದದಡಿಯಿಂದ, ವರದಾನದಿ  ಗುಪ್ತಗಾಮಿನಿಯಾಗಿ ಬಂದು ಪಕ್ಕದ ವರದತೀರ್ಥಕ್ಕೆ ಸೇರುತ್ತಾಳೆ .. ಇಲ್ಲಿಂದ ಪುನಃ ಗುಪ್ತಗಾಮಿನಿ .. ಆಕೆ ಕಾಣಿಸಿಕೊಳ್ಳುವುದು ಬನವಾಸಿಯಲ್ಲಿ , ಮಧುಕೇಶ್ವರನ  ಸನ್ನಿಧಿಯ ಬಳಿ . ಇಲ್ಲಿಂದ ಜನೋಪಕಾರ ಮಾಡಿ, ತುಂಗಭದ್ರೆಗೆ ಸೇರಿಕೊಳ್ಳುತ್ತಾಳೆ .. ಹಸಿರು ಗುಡ್ಡಗಳ ನಡುವಿನ ಪ್ರಶಾಂತ ತಾಣ.  ಅಲ್ಲಿ ನಮ್ಮ ಕ್ಯಾಮೆರಾಗಳು ಕಣ್ಣು  ಹೊಡೆದಿದ್ದೇ    ಹೊಡೆದಿದ್ದು !!... 
                       ಸಾಗರಕ್ಕೆ ವಾಪಾಸಾಗಿ  ಕಾಫಿ ಕುಡಿದು,  --" ಕೆಳದಿ " ಗೆ ಹೊರಟೆವು.. ಮಿಕ್ಕೆರಡು ಟೆಂಪೋದವರು  ಜೋಗದ ದಾರಿ ಹಿಡಿದು  ಅಲ್ಲಿ ತಂಗಿದ್ದರು. ನಾವು  ೫ km ದೂರದ   ಕೆಳದಿ ಸೇರಿದಾಗ ಸಂಜೆ ೫.೩೦. ಆಗಲೇ ಕತ್ತಲಿನ ತೆರೆ ಬೀಳುತ್ತಿತ್ತು . ಇಲ್ಲಿ  ರಾಮೇಶ್ವರನ ಗುಡಿ.. ವಿಭಿನ್ನ ಶೈಲಿಯಲ್ಲಿರುವ ಈ  ದೇವಸ್ಥಾನಕ್ಕೆ  ಹಿಂಭಾಗದಿಂದ ಪ್ರವೇಶ ಮಾಡುವ ಪದ್ಧತಿ . ಕೆಂಪುಚಂದನದ ಮೇಲ್ಚಾವಣಿ,  ಗಂಡಭೇರುಂಡ ,  ವಾಸ್ತುಪುರುಷ,  ಅಷ್ಟದಿಕ್ಪಾಲಕರು  ಇಲ್ಲಿನ ವಿಶೇಷ ಶಿಲ್ಪ.. ದೇವಸ್ಥಾನದ  ಪ್ರತಿ ಅಂಕನವೂ ವಿಶೇಷ,  ವಿಭಿನ್ನ.. ಹಿಂದಿರುಗುವಾಗ,  ಪೇಟೆ ಬೀದಿಯಲ್ಲಿ ಮಲ್ನಾಡ್ ಉಪ್ಪಿನಕಾಯಿ,   ಶ್ರೀಗಂಧದ ಕೆತ್ತನೆಯ  momento ಕೊಂಡು,  ಹೋಟೆಲ್ ನಲ್ಲಿ ಊಟ, ಹರಟೆ ಮುಗಿಸಿ ಮಲಗಿದೆವು..ಬೆಳಿಗ್ಗೆ, ೭.೩೦ ಕ್ಕೆ " ಜೋಗದ " ದಾರಿ ಸವೆಸಿದೆವು ..  ಉದ್ದಕ್ಕೂ  ವರುಣನ ಆಶೀರ್ವಾದ !!...   ಉಳಿದ ತಂಡವೂ ಸೇರಿ ಫಾಲ್ಸ್ ನೋಡಲು ಹೋದೆವು.. ಫಾಲ್ಸ್ ಕಾಣದಷ್ಟು ಮಳೆ, ಒಮ್ಮೊಮ್ಮೆ ಮಂಜು.  ನನ್ನ ಮೊಮ್ಮಗ ಪಾರ್ಥ ,  ಇದು ಜೋಗ್ ಫಾಲ್ಸೋ ? ಫಾಗ್ ಫಾಲ್ಸೋ? ಅಂದ .  ಎಲ್ಲರ ನಗುವೇ  ಅವನಿಗೆ ಉತ್ತರವಾಯ್ತು .. ಸೂರ್ಯನ ಕೃಪೆಯಿಂದ  ಒಮ್ಮೊಮ್ಮೆ ಕಂಡ ಜಲಪಾತದ ದೃಶ್ಯ ಚೇತೋಹಾರಿ !!.. ಕಣ್ ಸೆಳೆಯುವ ನೋಟ .. 

                                    ನೆನಪಿಗೆ ಬಂದಿದ್ದು,--  ಕಡೆಂಗೋಡ್ಲು ಶಂಕರ ಭಟ್ಟರ ಕವನ.. 

    ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈಭವವೇನು ?
    ಚೆಲ್ಲಿದರನಿತೂ ತೀರದ ನೀರಿನ ಜಡದೇಹದ ಕಾರ್ಮುಗಿಲೇನು ? 
    ಕೆರೆಗಳನುಕ್ಕಿಸಿ ತೊರೆಗಳ ಸೊಕ್ಕಿಸಿ, ಗುಡ್ಡವ ಬೆಟ್ಟವ ಕೊರೆಕೊರೆದು , 
    ಕಡಲಿನ ತೆರೆಗಳ ರಿಂಗಣ ಗುಣಿಯಿಸಿ, ಮೊರೆ ಮೊರೆವುದದೋ ಸುರಿಸುರಿದು !!......    
                    
               ೨ ಗಂಟೆ ಕಾಲ  ಅಲ್ಲಿದ್ದು, ಮಳೆಸ್ನಾನ ಮಾಡಿ, ಇನ್ನೂ ವಿಶೇಷ ಸ್ಥಳಗಳನ್ನು ನೋಡಲು ಹೊರಟೆವು.  ನಮ್ಮವರ ಕಸಿನ್  ಬಿಳಿಗಿರಿ ಅಲ್ಲೀ ಉದ್ಯೋಗಸ್ಥರು.  ಅವರ ಜೊತೆ  ರಾಣೀ ಹಳ್ಳ  ,  
ಹೆಂಜಕ್ಕಿ ಹಳ್ಳ,  ಆನೆಬಯಲು,  ಬಸವನ ಬಯಲು,  ನೋಡಿದೆವು.

  ಪ್ರಕೃತಿ ಚೆಲುವು ಇಲ್ಲಿ ನೂರ್ಮಡಿ... 

                " ಅತಿ ಗಾಂಭೀರ್ಯದಿ ಸಾರುವುದೇನು ? ಉದ್ಧಟತನದಿಂ ಹಾರುವುದೇನು ?
                  ಲತೆಯ ವಿಲಾಸದ ಲಾಸ್ಯವದೇನು ? ಶೈಲಾಗ್ರದಿಂ ನೀ ಬೀಳುವುದೇನು ?   " 
                                                                                                --  ಡಿ. ವಿ.ಜಿ..--  
                ಶರಾವತಿಯ   ಸೊಗಸೇ ಸೊಗಸು. ಎಷ್ಟಾದರೂ  ಮಲೆನಾಡಿನ ಮಗಳು !!   ಬಿಡಲು ಮನಸ್ಸಿಲ್ದೆ   ಬಿಟ್ಟಿದ್ದಾಯ್ತು..  ಇಲ್ಲಿಂದ  ಮೈಸೂರಿನ  ತಂಡ ಹಿಂತಿರುಗಿದರು.   ಮಿಕ್ಕ ನಾವೆಲ್ಲಾ ತಿರುಗಿದ್ದು.  " ವರದನ ಹಳ್ಳಿ --- ಶ್ರೀಧರಾಶ್ರಮ" ಕ್ಕೆ.   ತಲುಪಿದ್ದು ,  ೧೨.೩೦ ಕ್ಕೆ.  ಮಠದಲ್ಲಿ ಊಟದ ಸಮಯ .  ಆಗಸ್ಟ್ 15 ,  ಸ್ವಾತಂತ್ರ್ಯೋತ್ಸವಕ್ಕಾಗಿ , ವಿಶೇಷ ಸಿಹಿಯೂಟ.... ಚೆನ್ನಾಗಿ ಸೆಳೆದು ,  ಶ್ರೀಧರ ತೀರ್ಥ,  ಶ್ರೀಧರ ಗುಡ್ಡ   ನೋಡಿದೆವು.  ಧರ್ಮಧ್ವಜ , ತಪೋವನ ಸ್ಥಳ,  ಎಲ್ಲ ನೋಡತಕ್ಕದ್ದೆ..  ರಾತ್ರಿ  ತಿಪಟೂರಿನಲ್ಲಿ  ಊಟಕ್ಕಿಳಿದು   ಹತ್ತಿರದ ಮನೆಗಳಿಗೆ ತಕ್ಕಂತೆ   ಟೆಂಪೋನಲ್ಲಿ ವ್ಯವಸ್ಥೆ ಮಾಡ್ಕೊಂಡು , ಬೆಂಗಳೂರು ಸೇರಿದೆವು. ಮನೆ ಸೇರಿದ್ದು ರಾತ್ರಿ ೨.೩೦ .. ಇದು ನಮ್ಮ ಹನಿ ಹನಿ ಪ್ರವಾಸದ ಕಥೆ ........ !!!.. 

                                                             Harini  Narayan,    
                                                                         August  ,  2004..... 
            

1 comment:

  1. ಪ್ರವಾಸದ ನೆನಪುಗಳ ಹೂರಣ ಸೊಗಸಾಗಿದೆ.

    ReplyDelete